ಈ ಹಾಸ್ಯಪಾತ್ರಗಳ ಸರ್ಕಸ್ ಲೆಕ್ಕವೇ ಅಲ್ಲ!
ಲೇಖಕರು : ಪ್ರತಾಪಚಂದ್ರ ರಾವ್
ಮ೦ಗಳವಾರ, ಜುಲೈ 1 , 2014
|
ಇತ್ತೀಚೆಗೆ ಯಕ್ಷಗಾನದಲ್ಲಿ ಹಾಸ್ಯ ಪಾತ್ರದ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಇದೊಂದು ಕಿರು ಪ್ರತಿಕ್ರಿಯೆ. ``ದಕ್ಷಯಜ್ಞ' ಪ್ರಸಂಗದಲ್ಲಿ ದಕ್ಷನು ಈಶ್ವರನನ್ನು ಛೇಡಿಸುವ ಭಾಗದಲ್ಲಿಯೂ ಕೆಲವೊಮ್ಮೆ ಲೌಕಿಕ ಸಂಗತಿಗಳು ಬರುವುದನ್ನು ಕಂಡಿದ್ದೇವೆ. ಶಿವ - ದಾಕ್ಷಾಯಿಣಿಯರ ಸಂವಾದ ಸಾಮಾನ್ಯ ಗಂಡ- ಹೆಂಡಿರ ಸಂಭಾಷಣೆಯಂತೆ ನಿರೂಪಿಸಲ್ಪಡುತ್ತದೆ. ವೀರಭದ್ರ ಅರಳು ಮೆದ್ದು, ಬಾಳೆಹಣ್ಣು ತಿಂದು ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಾನೆ. ಕೆಲವೊಮ್ಮೆ ಅದನ್ನು ಸಭಿಕರತ್ತ ಬೀಸಾಡಿ ತಮಾಷೆ ಮಾಡುತ್ತಾನೆ. ಒಂದು ಪ್ರಸಂಗದಲ್ಲಿ ಇಷ್ಟೆಲ್ಲ ಸಂಗತಿಗಳು ಇಹಲೋಕಕ್ಕೆ ಹತ್ತಿರವಾಗುವಾಗ ವೃದ್ಧವಿಪ್ರ ಮಾತ್ರ ಪಾರಮಾರ್ಥಿಕವನ್ನು ಮಾತನಾಡಬೇಕು ಎಂದು ಆರೋಪಿಸುವುದು ಸರಿಯಲ್ಲ.
ಹಾಗೆ ನೋಡಿದರೆ, ಅದು ಹಾಸ್ಯಪಾತ್ರವೆಂದು ಪ್ರಸಂಗದ ಯಾವ ಭಾಗದಲ್ಲಿಯೂ ಹೇಳಲ್ಪಟ್ಟಿಲ್ಲ. ಅದನ್ನು ಹಾಸ್ಯಪಾತ್ರವಾಗಿಸಬೇಕೆಂಬ ಯಾವ ಉದ್ದೇಶವೂ ಪ್ರಸಂಗಕರ್ತನಿಗಿದ್ದಂತಿಲ್ಲ. ಆ ಪಾತ್ರವನ್ನು ಹಾಸ್ಯಗಾರರು ನಿರ್ವಹಿಸಲಾರಂಭಿಸಿದ ಬಳಿಕ ಅದು ಹಾಗಾಯಿತು. ಅಂದಿನ ಹಿರಿಯ ಹಾಸ್ಯಗಾರರು ಕಾಣಿಸಿದ ಮುದಿತನ, ಗಡ್ಡ ಅಲುಗುವುದು, ಬೆನ್ನು ಬಾಗುವುದು ಇತ್ಯಾದಿಗಳನ್ನು ಇಂದಿನ ವಿಮರ್ಶಕರು ``ಸರ್ಜನಶೀಲತೆ' ಎಂದು ವಾದಿಸಬಹುದು. ಆದರೆ, ದಕ್ಷನ ಯಾಗಕ್ಕೆ ಪೋಪ ಬ್ರಾಹ್ಮಣರು ಹಾಗಿದ್ದರು ಎಂಬುದಕ್ಕೆ ಯಾವ ಪುರಾವೆಯೂ ಇಲ್ಲ. ಅದು ಅಂದಿನವರ ಅನುಭವ ಅಷ್ಟೆ. ಹಾಗಾಗಿ, ತಪ್ಪು ಎಂದು ಹೇಳುವುದಾದರೆ ಹಿಂದಿನವರು ಮಾಡಿದ್ದೇ ತಪ್ಪು ಎಂದು ಹೇಳಬೇಕಾಗುತ್ತದೆ ಅಥವಾ ಇಂದಿನ ಬೆಳವಣಿಗೆಯನ್ನು ``ಇರಲಿ, ಬಿಡಿ' ಎಂದು ಒಪ್ಪಿಬಿಡಬೇಕಾಗುತ್ತದೆ. ಏನೋ ಒಂದು ಮಾಡುತ್ತಾರೆ, ಅದು ಅಂದಿನವರ ಅನುಭವದ ಮೂಸೆಯಲ್ಲಿ ತಯಾರಾದುದು, ಇದು ಇಂದಿನವರ ಅನುಭವದ ಒರೆಯಲ್ಲಿ ಸಿದ್ಧಗೊಂಡದ್ದು ಎಂದು ಸುಮ್ಮನಿರುವುದೇ ಸೂಕ್ತವೆನಿಸುತ್ತದೆ.
|
ಸಾ೦ಧರ್ಭಿಕ ಚಿತ್ರ
|
``ಸಮುದ್ರಮಥನ' ಪ್ರಸಂಗದಲ್ಲಿ ಬರುವ ಮೂಕಾಸುರ ರಾಕ್ಷಸರ ಪಡೆಯಲ್ಲಿ ಬರುವ ಒಂದು ಪಾತ್ರ. ಅಲ್ಲದೆ, ಇದು ಬಾಯಿಬಾರದವರನ್ನು ಅಥವಾ ಸರಿಯಾಗಿ ಮಾತನಾಡಲಾಗದವರನ್ನು ತಮಾಷೆ ಮಾಡುವಂಥ ಒಂದು ಪಾತ್ರವೂ ಹೌದು. ಅಂಥ ಸ್ಥಿತಿಯವರು ಯಕ್ಷಗಾನ ನೋಡಲು ಬಂದರೆ ಅವರಿಗೆ ಹೇಗನಿಸಬೇಡ! ಇದನ್ನು ಇಂದಿನವರು ತಮ್ಮ ಹಿಂದಿನವರು ಮಾಡಿದ ಪಾತ್ರವೆಂದು ಯಥಾಪ್ರಕಾರ ಅನುಕರಿಸಿ ಮಾಡುತ್ತಾರೆ. ಇಂಥ ಪಾತ್ರವನ್ನು ರೂಪಿಸಿದ್ದನ್ನೇ ಸರ್ಜನಶೀಲತೆಯೆಂದು ಒಪ್ಪಿಕೊಳ್ಳುವುದು ಸರಿ ಎನಿಸುವುದಿಲ್ಲ. ಪಾತ್ರಧಾರಿ ತಪ್ಪು ಮಾತನಾಡಿದರೆ ಅವನ ತಲೆಗೆ ತಾಳದಿಂದಲೋ ಜಾಗಟೆ ಕೋಲಿನಿಂದಲೋ ಕುಟ್ಟುತ್ತಿದ್ದರೆಂದು ಹೇಳಲಾಗುವ ಅಂದಿನ ಭಾಗವತರು ಇಂಥ ಅಸಂಬದ್ಧ ಪಾತ್ರಗಳನ್ನು ಸ್ವೀಕರಿಸಿ ಹೇಗೆ ಸುಮ್ಮನಾದರೊ! ಅಂದಿನವರೇ ಮೂಕಾಸುರನಂಥ ಪಾತ್ರಗಳನ್ನು ಸೃಷ್ಟಿಸಿರುವಾಗ ಇಂದಿನವರು ಕೆಪ್ಪಾಸುರನಂಥ ಪಾತ್ರಗಳನ್ನು ಸೃಷ್ಟಿಸುವುದು ದೊಡ್ಡ ಸಂಗತಿಯೇ ಅಲ್ಲ. ಇಂದಿನವರು ಅದು ರಂಗಕ್ಕುಚಿತವಾದ ಪಾತ್ರವಲ್ಲ ಎಂದು ಅದನ್ನು ಕೈಬಿಟ್ಟಿರಬಹುದು.
ಹಾಗೆ, ನೋಡಿದರೆ ಇಂದಿನ ಎಷ್ಟೋ ಹಾಸ್ಯಗಳು ಹಿಂದಿನಷ್ಟು ಅವಿವೇಕದಿಂದ ಕೂಡಿಲ್ಲ. ವೃತ್ತಿಗೆ ಸಂಬಂಧಿಸಿದ ಪಾತ್ರಗಳನ್ನು ಜಾತಿಯ ಜೊತೆಗೆ ಜೋಡಿಸಿದವರು ಹಿಂದಿನ ಹಿರಿಯ ಹಾಸ್ಯಗಾರರೇ. ಇದನ್ನು ಈಗಲೂ ಹಾಗೆಯೇ ಮಾಡಿದರೆ ಪೆಟ್ಟು ಬೀಳಬಹುದೆಂಬ ಭಯವಿರುವುದರಿಂದ ಇಂದಿನ ಹಾಸ್ಯಗಾರರು ಅದನ್ನು ಸಾಕಷ್ಟು ಬದಲಾಯಿಸಿದ್ದಾರೆ. ಸಾಮಾಜಿಕವಾದ ಎಚ್ಚರವಿರುವ ಪ್ರದೇಶಗಳಲ್ಲಿ ಇಂಥ ಹಾಸ್ಯಗಳಿಗೆ ಎಡೆಯಿಲ್ಲ. ಅವು ಇನ್ನೂ ಕೆಲವೆಡೆ ಉಳಿದಿದೆ ಎಂದಾದರೆ ಹಾಸ್ಯಗಾರರ ಕಾರಣದಿಂದ ಅಲ್ಲ , ಅಂಥ ಪಾತ್ರಗಳನ್ನು ಅನಿವಾರ್ಯವೆಂದು ಭಾವಿಸಲಾದ ಕಥಾಪ್ರಸಂಗಗಳ ಕಾರಣಕ್ಕಾಗಿ. ಇಂಥ ಜಾತಿನಿಂದನೆಯ ಪಾತ್ರಗಳಿಗಿಂತ ಹಾಸ್ಯಭಾವ ಬರುವಂತೆ ನಾನಾ ರೀತಿಯಲ್ಲಿ ಕುಣಿಯುವ, ಸರ್ಕಸ್ ಮಾಡುವ ಹಾಸ್ಯಗಾರರೇ ಸಹ್ಯವೆನಿಸುತ್ತಾರೆ. ಅದನ್ನೇ ಇಂದಿನವರು ಕೂಡ ಮಾಡುತ್ತಿದ್ದಾರೆಂದೆನಿಸುತ್ತದೆ. ಉಳಿದ ಪಾತ್ರಗಳು ನಾನಾ ರೀತಿಯ ಚೇಷ್ಟೆಗಳನ್ನು ಪ್ರದರ್ಶಿಸುತ್ತವೆ. ಕಂಸ, ಮಾಗಧ, ಅರ್ಜುನ, ಶನಿ ಮುಂತಾದ ಪಾತ್ರಗಳು ಸೈತ ಪದ್ಯಗಳನ್ನು ಪುನರಾವರ್ತಿಸುತ್ತ ಹಾಸ್ಯಾಸ್ಪದವಾಗಿ ಕುಣಿಯುತ್ತಿದ್ದವು, ಈಗಲೂ ಕುಣಿಯುತ್ತಿವೆ. ಅವುಗಳ ಮುಂದೆ ಹಾಸ್ಯಪಾತ್ರಗಳ ``ಸರ್ಕಸ್' ಯಾವ ಲಕ್ಷ್ಯವೂ ಅಲ್ಲ !
ಕೃಪೆ : http://www.udayavani.com
|
|
|